ಬೆಂಗಳೂರು ಕಂಪನಿಯಿಂದ ವಿಶ್ವದ ಮೊದಲ "ಬಾಹ್ಯಾಕಾಶ ಸರ್ವೇಕ್ಷಣಾ" ಉಪಗ್ರಹ

ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿಯೊಂದು ವಿಶ್ವದಲ್ಲೇ ಮೊದಲ ಬಾರಿಗೆ ಬಾಹ್ಯಾಕಾಶ ಕಂಗಾವಲು ಉಪಗ್ರಹವನ್ನು ನಿಯೋಜನೆ ಮಾಡಿದ್ದು, ಶನಿವಾರದಿಂದ ಅದು ಕಾರ್ಯಾರಂಭ ಮಾಡಿದೆ. ಬೆಂಗಳೂರು ಮೂಲದ "ದಿಗಂತರ" ಎಂಬ ಕಂಪನಿಯು ಈ ಉಪಗ್ರಹವನ್ನು ನಿಯೋಜಿಸುತ್ತಿದ್ದು, ಇದು ಭೂಮಿಯ ಸುತ್ತ ಇರುವ ಕಕ್ಷೆಯಲ್ಲಿನ 5cm ನಷ್ಟು ಸಣ್ಣ ವಸ್ತುವಿನ ಮೇಲೆಯೂ ಕಣ್ಣಿಡುವ ಸಾಮರ್ಥ್ಯ ಹೊಂದಿದೆ.
ದಿಗಂತರದ ಎಸ್.ಸಿ.ಒ.ಟಿ ಅಂದರೆ ವಸ್ತುಗಳ ಜಾಡು ಹಿಡಿಯಲು ಬಳಸುವ ಬಾಹ್ಯಾಕಾಶ ಕ್ಯಾಮೆರಾ ಉಪಗ್ರಹವನ್ನು ಅಮೆರಿಕದ ಸ್ಪೇಸ್ ಎಕ್ಸ್ ನ ಟ್ರಾನ್ಸ್ಪೋರ್ಟರ್-12 ರಾಕೆಟ್ ನಲ್ಲಿ ಜನವರಿ 14ರಂದು ಉಡಾವಣೆ ಮಾಡಲಾಗಿತ್ತು. ಈ ಉಪಗ್ರಹವು ದಕ್ಷಿಣ ಅಮೆರಿಕದಲ್ಲಿರುವ ಅರ್ಜೆಂಟೀನಾದ ಬ್ಯೂನಸ್ ಐರಿಸ್ ನ ಮೊದಲ ಚಿತ್ರವನ್ನು ಸೆರೆಹಿಡಿದು ರವಾನೆ ಮಾಡಿದೆ. ಈ ಬಗ್ಗೆ ಮಾತನಾಡಿದ ದಿಗಂತರ ಕಂಪನಿಯ ಸಿಇಒ ಅನಿರುದ್ಧ್ ಶರ್ಮ "ಎಸ್.ಸಿ.ಒ.ಟಿ ಉಪಗ್ರಹದ ಮೊದಲ ಫೋಟೋ ತಾಂತ್ರಿಕ ಮೈಲುಗಲ್ಲಿಗೂ ಮಿಗಿಲಾದುದು. ಇದು ಭವಿಷ್ಯದ ಪೀಳಿಗೆಗಳಿಗಾಗಿ ಭೂಮಿಯ ಕಕ್ಷೆಯನ್ನು ಕಾಪಾಡುವ ಬದ್ಧತೆಯ ಸಂಕೇತ" ಎಂದು ಹೇಳಿದ್ದಾರೆ.

ಬಾಹ್ಯಾಕಾಶದಲ್ಲಿ ಬಳಕೆಗೆ ಬಾರದ ಉಪಗ್ರಹಗಳ ಭಾಗಗಳಂತಹ ಕಸ ಹೆಚ್ಚಿದ್ದು, ಅದರ ಮೇಲೆ ಕಣ್ಣಿಡಲು ಈ ಉಪಗ್ರಹ ಸಹಕಾರಿಯಾಗಿದೆ. ಪ್ರಸ್ತುತವಿರುವ ಸೆನ್ಸರ್ ಗಳಿಗೆ ಇರುವ ಹವಾಮಾನ, ಭೌಗೋಳಿಕ ವ್ಯತ್ಯಾಸಗಳು ಸೇರಿದಂತೆ ಹಲವು ಅಡಚಣೆಗಳು ಎಸ್.ಸಿ.ಒ.ಟಿ ಉಪಗ್ರಹಕ್ಕಿರುವುದಿಲ್ಲ.

Post a Comment

0 Comments