ಕಲ್ಲಂಗಡಿಗೂ ಕೃತಕ ಬಣ್ಣ, ರುಚಿ ನೀಡಲಾಗುತ್ತಿದೆಯೇ..?

ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿನ ಮಾರಾಟ ಮತ್ತು ಖರೀದಿ ತುಂಬಾನೇ ಜೋರಾಗಿರುತ್ತದೆ. ರಸ್ತೆ ಯುದ್ದಕ್ಕೂ ಕಲ್ಲಂಗಡಿಯ ರಾಶಿ ಕಾಣಸಿಗುತ್ತದೆ. ಬಿಸಿಲಿನ ಬೇಗೆಯನ್ನು ಸಹಿಸಲಾಗದ ಜನರು ಕಲ್ಲಂಗಡಿ ಹಣ್ಣಿನ ಸೇವನೆಯನ್ನು ಯತೇಚ್ಛವಾಗಿ ಮಾಡುತ್ತಾರೆ. ಕಲ್ಲಂಗಡಿಯಲ್ಲಿ ಹೇರಳವಾದ ನೀರಿನಂಶವಿರುವುದರಿಂದ ಬೇಸಿಗೆಯಲ್ಲಿ ಮನುಷ್ಯನ ದೇಹದ ನಿರ್ಜಲೀಕರಣ ಸ್ಥಿತಿಯನ್ನು ತಪ್ಪಿಸುತ್ತದೆ. ಆದರೆ ಈಗ ಕಲ್ಲಂಗಡಿ ಪ್ರಿಯರಿಗೆ ಆತಂಕ ಶುರುವಾಗಿದ್ದು, ಎಲ್ಲೆಡೆ ಕಲ್ಲಂಗಡಿ ಹಣ್ಣಿನ ಒಳಭಾಗಕ್ಕೆ ಹೆಚ್ಚು ಕೆಂಪಾಗಿ ಆಕರ್ಷಣೀಯವಾಗಿರಲು  ಮತ್ತು ರುಚಿಯಾಗಿರಲು ರಾಸಾಯನಿಕ ಮದ್ದುಗಳನ್ನು ಇಂಜೆಕ್ಟ್ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ದೇಹಕ್ಕೆ ತಂಪನ್ನು ನೀಡುವ ಕಲ್ಲಂಗಡಿ ಈಗ ದುಷ್ಟ ಜನರ ಕೃತಕ ರಾಸಾಯನಿಕ ಔಷಧಿಗಳಿಂದ ಜನರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೃತಕ ಬಣ್ಣ ಸದ್ದು ಮಾಡುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತನಿಖೆಗೆ ಮುಂದಾಗಿದೆ. ‌ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕೆಲವು ಕಡೆಗಳಲ್ಲಿ ಕಲ್ಲಂಗಡಿ ಹಣ್ಣು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು ಫಲಿತಾಂಶ ಬಂದ ಮೇಲಷ್ಟೇ ಸತ್ಯಾಂಶ ಹೊರಬೀಳಲಿದೆ. 


ರಸ್ತೆ ಬದಿಗಳಲ್ಲಿ, ಅಂಗಡಿಗಳಲ್ಲಿ, ಮಾಲ್ ಗಳಲ್ಲಿ, ಸಂತೆಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ಮಧ್ಯವರ್ತಿಗಳು ಖರೀದಿಸಿ ಮಾರಾಟ ಕೇಂದ್ರಗಳಿಗೆ ತಲುಪಿಸುತ್ತಾರೆ. ಈ ಮಧ್ಯವರ್ತಿಗಳಲ್ಲಿ ಕೆಲವರು ಹಣ್ಣುಗಳಿಗೆ ಕೃತಕವಾಗಿ ಕೆಂಪು ಬಣ್ಣ ಬರವಂತೆ ಇಂಜೆಕ್ಷನ್ ನೀಡುತ್ತಾರೆ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ಕೊಯ್ದಾಗ ಅದು ಅತ್ಯಂತ ಕೆಂಪಾಗಿ, ಆಕರ್ಷಣೀಯವಾಗಿ ಕಾಣುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಕೆಲವರು ಕೆಂಪು ಬಣ್ಣದ ಜೊತೆಗೆ ರುಚಿಯನ್ನು ಹೆಚ್ಚಿಸುವಂತಹ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿರುತ್ತಾರೆ. ಹೀಗಾಗಿ ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ.  ಅಂಗಡಿಯವರು ನೀಡುವ ಸ್ಯಾಂಪಲ್ ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ ಹಾಗೂ ರುಚಿಕರವಾಗಿರುತ್ತದೆ. ಇದಕ್ಕೆ ಗ್ರಾಹಕರು ಮರುಳಾಗಿ ಹೆಚ್ಚು ಹೆಚ್ಚು ಕಲ್ಲಂಗಡಿ ಹಣ್ಣುಗಳನ್ನು ಕೊಂಡುಕೊಳ್ಳುತ್ತಾರೆ. ಹೀಗಾಗಿ ಕೃತಕ ರಾಸಾಯನಿಕಗಳಿಂದ ಜನರನ್ನು ಪಾರು ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದು ಸಂಶಯಾಸ್ಪದ ಕಲ್ಲಂಗಡಿ ಹಣ್ಣುಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ ಎನ್ನಲಾಗಿದೆ.


Post a Comment

0 Comments