ಮಕ್ಕಳ ಸುರಕ್ಷತೆಗಾಗಿ ಪ್ರತಿ ಶಾಲೆಯಲ್ಲೂ ಸುರಕ್ಷಾ ಸಮಿತಿ ರಚನೆ

ಮಕ್ಕಳ ಸುರಕ್ಷತೆ, ಸೈಬರ್ ಬಳಕೆ ಭದ್ರತೆ ಸೇರಿದಂತೆ ಹಲವು ತೊಂದರೆಗಳಿಂದ ಮಕ್ಕಳನ್ನು ರಕ್ಷಿಸಲು ಮತ್ತು ಯಾವುದೇ ಅಪಾಯಕ್ಕೆ ಮಕ್ಕಳು ಸಿಲುಕುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿಯೊಂದು ಶಾಲೆಯಲ್ಲಿಯೂ ಶಾಲಾ ಸುರಕ್ಷಾ ಸಮಿತಿ ರಚಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದಾರೆ.



ನಗರ ಪ್ರದೇಶಗಳಲ್ಲಿ ರಚನಾತ್ಮಕ ಸುರಕ್ಷೆ, ಆಹಾರ ಮತ್ತು ನೀರಿನ ಸುರಕ್ಷೆ, ಸೈಬರ್ ಬಳಕೆ ಭದ್ರತೆ ಹಾಗೂ ದುರ್ಬಳಕೆ, ನಾನಾ ರೀತಿಯ ಕಿರುಕುಳಗಳು ಮಕ್ಕಳ ಪಾಲಿಗೆ ಅತಿ ಅಪಾಯಕಾರಿಯಾಗಿವೆ. ಜೊತೆಗೆ ಮಕ್ಕಳು ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ಪ್ರಯಾಣಿಸುವಾಗ ಸುರಕ್ಷಾ ಕ್ರಮಗಳ ಪಾಲನೆಯು ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಸಮಗ್ರ ಶಿಕ್ಷಣ ಕರ್ನಾಟಕವು ಶಾಲಾ ಸುರಕ್ಷಾ ಸಮಿತಿ ರಚಿಸಲು ಉದ್ದೇಶಿಸಿದೆ. ಮತ್ತು ಈ ಸಮಿತಿಯ ಮೇಲೆ ಶಾಲಾ ಅಭ್ಯರ್ಥಿ ಸಮಿತಿ ವರ್ಷವಿಡಿ ನಿಗ ಇಡಬೇಕು ಎಂದು ಸೂಚಿಸಿದೆ. ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೂ ಅದು ಅವರ ಭೌತಿಕ ಮತ್ತು ಸೃಜನಾತ್ಮಕ ಬೆಳವಣಿಗೆಗೆ ನಕರಾತ್ಮಕವಾಗಿ ಪ್ರಭಾವ ಬೀರುತ್ತದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುವುದಲ್ಲದೆ ದೇಶದ ಭವಿಷ್ಯಕ್ಕೂ ಬಹುದೊಡ್ಡ ಪೆಟ್ಟು ಬೀಳುತ್ತದೆ.


‌ ವಿಪತ್ತು ನಿರ್ವಹಣೆ ಸಮಿತಿಯು ಶಾಲೆಯಲ್ಲಿರುವ ದೂರು ಪೆಟ್ಟಿಗೆಯು ಪ್ರಮುಖ ಸ್ಥಳದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೂ ಅದರ ಪರಿಶೀಲನೆ ನಡೆಸಿ ಮಕ್ಕಳ ದೂರುಗಳಿದ್ದಲ್ಲಿ 15 ದಿನಗಳೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರಥಮ ಚಿಕಿತ್ಸೆ, ವಿದ್ಯುತ್ ಆಘಾತ ಮತ್ತು ಸುರಕ್ಷಾ ಕ್ರಮ, ಬಾಲಕಾರ್ಮಿಕರ ಬಗ್ಗೆ ಜಾಗೃತಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲು ಸೂಚಿಸಲಾಗಿದೆ.







Post a Comment

0 Comments