ಇನ್ಮೇಲೆ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ ಆರಂಭ: ಡಿಕೆ ಶಿವಕುಮಾರ್ ಘೋಷಣೆ!!

ಮುಂಬರುವ ವರ್ಷದಿಂದಲೇ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ ಆರಂಭ ಮಾಡುವುದಾಗಿ ರಾಜ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಮಂಗಳೂರಿನ  ಗುರುಪುರದಲ್ಲಿ ನಡೆದ ದ್ವಿತೀಯ ವರ್ಷದ ಹೊನಲು ಬೆಳಕಿನ ಮೂಳೂರು- ಅಡ್ಡೂರು ಜೋಡುಕೆರೆ ಕಂಬಳ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಹಾಗೂ ಮೈಸೂರು ಜಿಲ್ಲಾ ಸಚಿವರ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
 "ಈ ಬಾರಿಯ ದಸರಾ ಸಮಿತಿಯ ಉಪಾಧ್ಯಕ್ಷನಾಗಿದ್ದೇನೆ. ದಸರಾ ಹಬ್ಬದಲ್ಲಿ ಇನ್ನು ಮುಂದೆ ಕಂಬಳವು ದಕ್ಷಿಣ ಕನ್ನಡದ ಪರಂಪರೆಯಗಿ ಮುಂದುವರೆಯಲಿದೆ. ಮೂರು ಎಕರೆ ಪ್ರದೇಶದಲ್ಲಿ ಕಂಬಳ ಕೆರೆ ನಿರ್ಮಾಣ ಮಾಡುವ ಆಲೋಚನೆಯಿದೆ. ಇದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ‌ಜನ ಕಂಬಳ ವೀಕ್ಷಣೆ ಮಾಡಬಹುದು. ನೀವೆಲ್ಲರೂ ಸೇರಿದರೆ ಸರ್ಕಾರದಿಂದ ಸಹಕಾರ ನೀಡಲಾಗುವುದು. ಕಂಬಳವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಬೆಳೆಸೋಣ" ಎಂದು ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆಯಾದ ಬ್ಯಾಂಕ್ ಗಳಿಂದ ಇಡೀ ದೇಶಕ್ಕೆ ಆರ್ಥಿಕ ಅಡಿಪಾಯ ಸೃಷ್ಟಿಯಾಯಿತು. ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾದ ಶ್ರೀಮಂತಿಕೆ ಯಾವ ಜಿಲ್ಲೆಯಲ್ಲಿಯೂ ಇಲ್ಲ. ಕಂಬಳದ ಮೂಲಕ ಇಡೀ ದೇಶದಲ್ಲಿಯೇ ಸಾಂಸ್ಕೃತಿಕವಾಗಿ ಸಾಕ್ಷಿಗುಡ್ಡೆಯನ್ನು ಕಂಬಳ ಕ್ರೀಡೆ ನಿರ್ಮಾಣ ಮಾಡಿದೆ" ಎಂದರು.

"ಈ ಜಿಲ್ಲೆಯ ಧಾರ್ಮಿಕಯೇ ನಿಮ್ಮ ಶಕ್ತಿ. ಹಲವಾರು ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಈ ಜಿಲ್ಲೆಯಲ್ಲಿವೆ. ಈ ಜಿಲ್ಲೆಯ ಯುವಕರ ಬುದ್ಧಿವಂತಿಕೆ ಬೇರೆ ದೇಶಗಳಿಗೆ ಹೋಗುತ್ತಿದೆ. ಇದು ತಪ್ಪಬೇಕು. ಈ ಜಿಲ್ಲೆಗೆ ಪ್ರವಾಸಿ ಕ್ಷೇತ್ರದಲ್ಲಿ ಅತ್ಯಂತ ಅವಕಾಶವಿದೆ. ಇತ್ತೀಚೆಗೆ ಸದನದಲ್ಲಿ ಮಾತನಾಡುತ್ತ ಈ ಭಾಗದ ಶಾಸಕರ ಜೊತೆ ಚರ್ಚೆ ಮಾಡುವಂತೆ ತಿಳಿಸಿದ್ದೆ. ಇಡೀ ದೇಶದ ಯಾವ ರಾಜ್ಯಗಳಿಗೂ ಇಲ್ಲದ ಅತ್ಯಂತ ಉದ್ದದ ಕರಾವಳಿ ನಿಮಗಿದೆ. ಸದ್ಯದಲ್ಲಿಯೇ ಎರಡು ಜಿಲ್ಲೆಗಳ ಶಾಸಕರ ಸಭೆ ನಡೆಸಲಾಗುವುದು" ಎಂದರು.

"ಮನುಷ್ಯ ಸೋಲುವುದು ಕಲಿತಾಗ ಮಾತ್ರ ಗೆಲ್ಲಲು ಸಾಧ್ಯ. ಕ್ರೀಡೆಯಲ್ಲಿ ಮನುಷ್ಯನ ಗಾತ್ರ ಮುಖ್ಯವಲ್ಲ, ಹೃದಯವಂತಿಕೆ ಮುಖ್ಯ. ಕೋಣಗಳ ಮನಸ್ಸನ್ನು ಗೆದ್ದರೆ ಮಾತ್ರ ಸ್ಪರ್ಧಿ ಕಂಬಳ ಗೆಲ್ಲಲು ಸಾಧ್ಯ. ಕಂಬಳಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ದ. ಕಂಬಳಕ್ಕೆ ಯಾವುದೇ ಜಾತಿ,‌ಧರ್ಮವಿಲ್ಲ ಇಲ್ಲಿರುವುದು ಧಾರ್ಮಿಕ ಆಚರಣೆ, ಕ್ರೀಡೆ ಹಾಗೂ ಸಂಸ್ಕೃತಿ" ಎಂದು ಹೇಳಿದರು.

Post a Comment

0 Comments