ಆನೆಗಳ ದಾಳಿ ತಡೆಯಲು ಹಾಗೂ ಅವುಗಳ ಚಲನವಲನಗಳನ್ನು ಗಮನಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇನ್ಫಿಕ್ಷನ್ ಲ್ಯಾಬ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶೀಯ ಕರ್ನಾಟಕ ಪರಿಶೋಧಿತ ಪತ್ತೆ (ಕೆಪಿ ಟ್ರ್ಯಾಕರ್) ಹೆಸರಿನ ರೇಡಿಯೋ ಕಾಲರ್ ಒಂದನ್ನು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೋಕಾರ್ಪಣೆ ಮಾಡಿದ್ದಾರೆ. ಪ್ರತೀ ರೇಡಿಯೋ ಕಾಲರ್ಗೆ 1.80 ಲಕ್ಷ ರೂಪಾಯಿ ವೆಚ್ಚ ತಗುಲಿದ್ದು ಇದರ ತೂಕ 7 ಕೆ.ಜಿ ಇದೆ.
ಅರಣ್ಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ರೇಡಿಯೋ ಕಾಲರ್ ಅನ್ನು ಹಸ್ತಾಂತರ ಮಾಡಿದರು. ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆನೆಗಳು ನಾಡಿಗೆ ಬರುವುದನ್ನು ತಡೆಯಲು ಹಾಗೂ ಅವುಗಳ ಚಲನವಲನಗಳನ್ನು ಗಮನಿಸುವ ಉದ್ದೇಶದಿಂದ ಆನೆಗಳ ಗುಂಪಿನ ನಾಯಕಿಗೆ ಈ ರೇಡಿಯೋ ಕಾಲರ್ ಅನ್ನು ಅಳವಡಿಸಲಾಗುವುದು. ಇದರಿಂದ ಆನೆಗಳ ಸಂಚಾರದ ಕುರಿತು ಮಾಹಿತಿ ಲಭ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು. ಈ ಮೂಲಕ ಆನೆಗಳ ದಾಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಕ್ರಮವನ್ನು ಕೈಗೊಂಡಿರುವುದು ಸಂತಸದ ಸಂಗತಿಯಾಗಿದೆ.
0 Comments